ಓದಲು ಬಂದವರು.......

Wednesday 30 November 2011

ವಾರ್ಷಿಕ ವರದಿ - ೨೦೧೧




ಏಳು ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದಾಗ....
ಮೊನ್ನೆ ಅಕ್ಟೋಬರ್ ೨, ಗಾಂಧಿ ಜಯಂತಿಯ ದಿನ ನಮ್ಮ ವಾಚನಾಲಯಕ್ಕೆ ಬರೋಬ್ಬರಿ ಏಳು ವರ್ಷ ಪೂರೈಸಿದ ಸಂಭ್ರಮ. ಊರಿನವರ ಈ ಪ್ರಯತ್ನ ಎರಡು ವರ್ಷ ಮುಗಿಸಿದರೆ ಹೆಚ್ಚು ಎಂದುಕೊಂಡವರಿಗೆ ನಾವು ಆಘಾತ ಮೂಡಿಸಿರುವುದು ಖುಷಿ ವಿಚಾರ. ಬಿಟ್ಟು ಹೋಗುತ್ತಿರುವ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಈ ಬಾರಿ ಪುನರಾರಂಭಿಸಬೇಕು ಎಂಬ ಯೋಚನೆಗೆ ಸಂಚಾಲಕನಾದ ನನ್ನ ವೈಯುಕ್ತಿಕ ಸಮಸ್ಯೆಗಳೇ ಅಡ್ಡಿಯಾಗಿರುವುದು ನನ್ನ ಮಟ್ಟಿಗೆ ಬೇಸರದ ಮಾತು. ಆದರೆ ಗ್ರಾಮಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಜೆ.ವಿ.ದಿನೇಶ್ ಹಾಗೂ ನಮ್ಮ ಕಾರ್ಯಕಾರಿ ಸಮಿತಿಯ ಒತ್ತಾಸೆಯಿಂದ ವಾರ್ಷಿಕೋತ್ಸವ ಆಚರಿಸುವ ನಿರ್ಧಾರಕ್ಕೆ ಬರಲಾಗಿದೆ. ದಿನಾಂಕ ನಿಗದಿಗೆ ಕೆಲ ಸಮಯ ಬೇಕು. ಅದರ ಹೊರತಾಗಿ, ವಾಚನಾಲಯದ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ರಾಜ್ಯ ಮಟ್ಟದ ದಿನಪತ್ರಿಕೆಯನ್ನು ಈವರೆಗೆ ಒದಗಿಸಲಾಗದಿದ್ದುದು ದೊಡ್ಡ ಕೊರತೆಯಾಗಿತ್ತು. ಒಂದೆಡೆ ತಿಂಗಳೊಂದಕ್ಕೆ ಸರಿಸುಮಾರು ೧೦೦ ರೂ.ನ್ನು ಒಂದು ಪತ್ರಿಕೆಗೆ  ವೆಚ್ಚ ಮಾಡುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ದೈನಿಕ ಒದಗಿಸುವ ಯೋಚನೆಯನ್ನೇ ಕೈಬಿಟ್ಟಿದ್ದೆವು. ಆದರೆ ‘ಹೊಸದಿಗಂತ ರಾಜ್ಯ ದೈನಿಕ ಈಗ ಪ್ರತಿ ದಿನ ಲಭ್ಯ. ಇದನ್ನು ದಿಗಂತದ ಶಿವಮೊಗ್ಗ ಕಛೇರಿ ನಮಗೆ ಉಚಿತವಾಗಿ ಒದಗಿಸುತ್ತಿರುವುದು ವಿಶೇಷ. ಕೇವಲ ಒಂದು ದಿನದಲ್ಲಿ ನಮ್ಮ ವಿನಂತಿ ಪತ್ರ ಪಡೆದು, ತಟ್ಟನೆ ಪತ್ರಿಕೆಯ ಪ್ರತಿ ಒದಗಿಸಲು ಆರಂಭಿಸಿದ ಅವರ ಸಹಾಯ ನಮಗೆ ಪ್ರಾತಃಸ್ಮರಣೀಯ. ವಾಸ್ತವವಾಗಿ, ಆ ಪತ್ರಿಕೆಯ ಶಿವಮೊಗ್ಗ ಸಂಪಾದಕೀಯ ವಿಭಾಗದಲ್ಲಿರುವ ಸುಬ್ರಮಣ್ಯ ಹೊರಬೈಲು ಈ ಅನುಕೂಲ ನಮಗೆ ಸಿಗಲು ಮುಖ್ಯ ಕಾರಣ. ಅವರಿಗೆ ಹಾಗೂ ಪತ್ರಿಕಾ ಬಳಗಕ್ಕೆ ನಮ್ಮ ಕೃತಜ್ಞತೆಗಳು.
ಕಳೆದ ಬಾರಿ ಇನ್ಫೋಸಿಸ್‌ನಿಂದ ಕಂಪ್ಯೂಟರ್ ಸೌಲಭ್ಯ ಪಡೆದಿದ್ದರೂ ಅದಕ್ಕೆ ಪೂರಕವಾಗಿ ಅಗತ್ಯವಾಗಿದ್ದ ಯುಪಿಎಸ್ ಸೌಲಭ್ಯವನ್ನು ಸಾಲ ರೂಪದಲ್ಲಿ ಪಡೆದಿದ್ದೆವು. ನಮ್ಮ ವ್ಯವಹಾರದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ಈ ವರ್ಷ ಯುಪಿಎಸ್ ಖರೀದಿಗೆಂದು ಮೂರು ಸಾವಿರ ರೂ.ಗಳನ್ನು ಒದಗಿಸಿರುವುದು ನಮ್ಮ ಭಾರವನ್ನು ಕಡಿಮೆ ಮಾಡಿದಂತಾಗಿದೆ. ಬ್ಯಾಂಕ್‌ನ ಮುಖ್ಯ ಪ್ರಬಂಧಕರು ಹಾಗೂ ಶಾಖೆಯ ಎಲ್ಲ ಸ್ನೇಹಿತರಿಗೆ ಅಭಿನಂದನೆಗಳು. ವರದಿ ಸಾಲಿನಲ್ಲಿ ಮತ್ತೊಮ್ಮೆ ಧನಸಹಾಯ ಕೊಟ್ಟಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಎರಡು ಸಾವಿರ ರೂ ದಯಪಾಲಿಸಿದ್ದಾರೆ. ೨೦೦೮ರಲ್ಲಿಯೂ ಧರ್ಮಸ್ಥಳದಿಂದ ಎರಡು ಸಾವಿರ ರೂ.ಗಳ ಪ್ರಸಾದ ರೂಪದ ಧನಸಹಾಯ ಲಭ್ಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ನಮ್ಮ ಸ್ಥಳೀಯ ಎಡಜಿಗಳೇಮನೆ ಗ್ರಾಮ ಪಂಚಾಯ್ತಿಯ ಸಹಾಯವನ್ನು, ಬೆಂಬಲವನ್ನು ವಿಶೇಷವಾಗಿ ಸ್ಮರಿಸಬೇಕು. ಕಳೆದ ವರ್ಷ ಪಂಚಾಯ್ತಿ ನಿರ್ಣಯವೊಂದನ್ನು ಸ್ವೀಕರಿಸಿ, ಈ ವಾಚನಾಲಯಕ್ಕೆ ಪ್ರತಿ ವರ್ಷ ಒಂದು ಸಾವಿರ ರೂ.ಗಳ ಅನುದಾನ ನೀಡಲು ತೀರ್ಮಾನಿಸಿತ್ತು. ಅದರಂತೆ ಕಳೆದ ವರ್ಷ ಹಾಗೂ ಈ ಬಾರಿ ಈಗಾಗಲೇ ಒಂದು ಸಾವಿರ ರೂ.ಗಳನ್ನು ನಮಗೆ ಅದು ಒದಗಿಸಿದೆ. ಪ್ರತಿ ವರ್ಷ ಧನಸಹಾಯ ಕೊಡುವ ಯೋಚನೆ ಅಲ್ಲಿನ ಸದಸ್ಯ ಶಾರದಾಪುರದ ಮಹಾದೇವರದ್ದು. ಹಾಗೆಯೇ ಇದಕ್ಕೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಟಿ.ಪಿ.ಬಾಲಸುಬ್ರಮಣ್ಯ, ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ಎಸ್.ಎಸ್.ಬಿರಾದಾರ್‌ರ ಬೆಂಬಲವೂ ವ್ಯಕ್ತವಾಗಿದ್ದು ನಮ್ಮ ಅದೃಷ್ಟ.
ಹಲವು ಕನಸುಗಳ ಜೊತೆಗೆ ವಾಚನಾಲಯಕ್ಕೆ ಹೆಚ್ಚು ಅನುಕೂಲಕರವಾದ ಕಟ್ಟಡ ಹೊಂದುವುದು ನಮ್ಮ ಮುಖ್ಯ ಆಶಯಗಳಲ್ಲೊಂದು. ಹತ್ತು ಸಾವಿರ ರೂ.ಗಳಂತೆ ದಾನಿಗಳಿಂದ ಹಣ ಪಡೆದು ಇದನ್ನು ಸಾಕಾರಗೊಳಿಸಿಕೊಳ್ಳಬಹುದು ಎಂಬ ನಿರೀಕ್ಷೆ ನಮ್ಮದು. ಇದಕ್ಕೆ ಕೂಡ ಈ ವರ್ಷ ಚಾಲನೆ ಸಿಕ್ಕಿದೆ. ಮಂಗಳೂರಿನವರಾದ ಮತ್ತು ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಚರಣ್ ತಮ್ಮ ತಂದೆ  ದಿವಂಗತ ಹೆಚ್.ರಮೇಶ್‌ರಾವ್‌ರ ಸ್ಮರಣಾರ್ಥ ನಮಗೆ ಐದು ಸಾವಿರ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ. ಇದೇ ಕ್ರಮದಲ್ಲಿ ಉಳಿದ ಸಹೃದಯರೂ ಮುಂದಾದರೆ ನಮ್ಮ ಕೆಲಸ ಹೂ ಎತ್ತಿದಂತೆ ಪೂರೈಸಲ್ಪಡುತ್ತದೆ. ಅಶೋಕ್ ಚರಣ್‌ರಿಗೆ ಹಾಗೂ ಅವರ ಸಹಾಯ ಸಿಗಲು ಕಾರಣೀಕೃತರಾದ ಬೆಂಕಟವಳ್ಳಿ ಬಂಗಾರೇಶ್ವರ್‌ರಿಗೆ ನಮ್ಮ ಬಹಿರಂಗ ಧನ್ಯವಾದ. ಬಂಗಾರೇಶ್ವರರವರು ನಮ್ಮ ಆರಂಭಿಕ ದಿನಗಳಿಂದಲೂ ಪ್ರಾಯೋಜಕರು.
ಸಹಾಯಹಸ್ತಗಳು ನಿರಂತರವಾಗಿ ನಮ್ಮ ಜೊತೆಗಿವೆ. ಈ ಬಾರಿಯೂ ಭೀಮನಕೋಣೆ ಜಿ.ರಾಘವೇಂದ್ರ ಒಂದು ಸಾವಿರ ರೂ.ಗಳ ದೇಣಿಗೆ ಕೊಟ್ಟಿದ್ದಾರೆ. ಒಮ್ಮೆಗೇ ೩,೧೯೯ ರೂ. ಕೊಟ್ಟು ಮೈಸೂರಿನ ಹೆಚ್.ವಿ.ವಾಗೀಶ್ ಐದು ವರ್ಷಗಳ ಕಾಲ ‘ದಿ ವೀಕ್ ಸಾಪ್ತಾಹಿಕ ನಮಗೆ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ. ವಾಗೀಶ್ ಗ್ರಾಮದ ನಿಟ್ಲಿ ಗಣಪತಿಯವರ ಅಳಿಯ ಎಂಬುದು ಸಾಂದರ್ಭಿಕ ನೆನಪಷ್ಟೇ.
ಈಗ ನಮ್ಮೊಂದಿಗಿರುವ ಪ್ರಾಯೋಜಕರು ೪೦ . ಕಳೆದ ಸಾಲಿಗಿಂತ ನಾಲ್ಕು ಮಂದಿ ಹೆಚ್ಚು. ೨೬ ಉಚಿತ ಪತ್ರಿಕೆಗಳು ಸೇರಿದಂತೆ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ೬೭. ಇದೂ ಕಳೆದ ಸಾಲಿಗಿಂತ ನಾಲ್ಕು ಅಧಿಕ. ಈ ಶುಷ್ಕ ಅಂಕಿಅಂಶ ಕೂಡ ವಾಚನಾಲಯ ನಿಧಾನವಾಗಿಯಾದರೂ ಧನಾತ್ಮಕವಾಗಿ ಮುನ್ನಡೆದಿರುವುದನ್ನು  ಪ್ರತಿಫಲಿಸುತ್ತದೆ.
ಸತತ ಮೂರು ವರ್ಷಗಳಿಂದ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯಡಿ ಪುಸ್ತಕ, ಪತ್ರಿಕೆ ನೀಡಲಾಗುತ್ತಿದ್ದು, ವರದಿ ಸಾಲಿನಲ್ಲೂ ಮುಂದುವರೆದಿದೆ. ೪೦-೩೫ ಮಕ್ಕಳು ಸದಸ್ಯರಾಗುತ್ತಿದ್ದ  ಸಂಭ್ರಮ ಈಗಿಲ್ಲ. ಈ ಬಾರಿ ಕೇವಲ ಹತ್ತು ಮಕ್ಕಳು ಈ ಯೋಜನೆಯಡಿ ಚಂದಾದಾರರಾದುದು ಖುಷಿ ಕೊಡುವ ವಿಚಾರವಲ್ಲ. ನಮ್ಮ ಅಭಿಮಾನಿ ಪ್ರಾಯೋಜಕರಲ್ಲೊಬ್ಬರಾದ ಅಲ್ಲಿನ ಶಿಕ್ಷಕ ರಾಮಚಂದ್ರ ಹೆಗಡೆಯವರು  ಸುಸೂತ್ರವಾಗಿ ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.
ಕಳೆದ ಅಕ್ಟೋಬರ್‌ನಿಂದ ಈ ಬಾರಿಯ ಸೆಪ್ಟೆಂಬರ್‌ವರೆಗಿನ ವಾಚನಾಲಯದ ಆದಾಯ ೨೫,೭೫೬ ರೂ.  ಇದೇ ವೇಳೆ ವಿವಿಧ ಬಾಬತ್ತಿಗೆ ಆದ ಖರ್ಚು ೨೬,೧೫೨ ರೂ. ಈ ಅವಧಿಯ ೩೯೬ ರೂ. ಕೊರತೆ ದಾನಿಗಳು ಹಾಗೂ ಮಾತೃಸಂಸ್ಥೆ ಗ್ರಾಮಾಭಿವೃದ್ಧಿ ಸಮಿತಿಯ ವಾರ್ಷಿಕ ಬಜೆಟ್ ಕೊಡುಗೆಯಿಂದ ಸರಿದೂಗಿಸಲ್ಪಡುತ್ತದೆ ಎಂಬ ನಂಬಿಕೆ ಆಡಳಿತಕ್ಕಿದೆ.
ಕಳೆದ ವರ್ಷ ವಾಚನಾಲಯದ ಖಾತೆಯಲ್ಲಿ ೨೫,೨೮೨ ರೂ. ಠೇವಣಿ ಇರಿಸಲಾಗಿತ್ತು. ಈ ಬಾರಿ ಆ ಮೊತ್ತ ೪೩,೧೨೦ ರೂ.ಗೆ ಏರಿದೆ. ಅಂದರೆ ಠೇವಣಿ ಪ್ರಮಾಣದಲ್ಲಿ ೧೭,೮೩೮ ರೂ. ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವುದು ಗಮನಾರ್ಹ ಅಂಶ. ಈ ಮೊತ್ತವನ್ನು ವಾಚನಾಲಯದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಬಿದ್ದರೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ವರ್ಷದ ೩೬೫ ದಿನಗಳಲ್ಲಿ ಸುಲಲಿತವಾಗಿ ಕೆಲವು ಹೆಜ್ಜೆಗಳನ್ನಾದರೂ ಇಡಲು ಅಕ್ಷರ ಅಭಿಮಾನಿಗಳಾಗಿರುವ, ಮುಖತಃ ಪರಿಚಯವಿಲ್ಲದಿದ್ದರೂ ಬೆಂಬಲಕ್ಕೆ ನಿಂತಿರುವ ಪ್ರಾಯೋಜಕರು, ದಾನಿಗಳು, ಪತ್ರಿಕಾ ಸಂಪಾದಕರು ಅಕ್ಷರಶಃ ಊರುಗೋಲು. ಈ ಸಹಕಾರ ಅನವರತವಾಗಿರಲಿ ಎಂಬುದೇ ನಮ್ಮ ಬೇಡಿಕೆ. ನಿಮ್ಮ ಆತ್ಮೀಯರಿಂದಲೂ ಈ ಅಕ್ಷರ ಆಂದೋಲನಕ್ಕೆ ಕೈಜೋಡಿಸಲು ಪ್ರೇರೇಪಿಸಿ ಎಂದು ವಿನಂತಿಸುತ್ತೇವೆ.
-ಮಾ.ವೆಂ.ಸ.ಪ್ರಸಾದ್,
ಸಂಚಾಲಕರು, ೨೨.೧೧.೨೦೧೧



ಸಂಪರ್ಕ- ಮಾ.ವೆಂ.ಸ.ಪ್ರಸಾದ್, ‘ಉದಯವಾಣಿ ವರದಿಗಾರ - ಸಾಗರ,
ಎಡಜಿಗಳೇಮನೆ, ಸಾಗರ-೫೭೭೪೦೧
ಫೋ: ೦೮೧೮೩ ೨೩೬೦೬೮, ೯೮೮೬೪೦೭೫೯೨
ಇ-ಮೇಲ್: mಚಿvemsಚಿ@gmಚಿiಟ.ಛಿom



Wednesday 4 May 2011

ವಾರ್ಷಿಕ ವರದಿ - ೨೦೧೦




ಕಳೆದ ಅರ್ಧ ಡಜನ್‌ನಲ್ಲಿ ಈ ವರ್ಷ...............

ಕಳೆದ ವರ್ಷದಿಂದ ಅಕ್ಟೋಬರ್ ಎರಡರಂದು ವಾಚನಾಲಯದ ಆರಂಭ ದಿನದ ನೆನಪಿನಲ್ಲಿ ಆಚರಿಸುತ್ತಿದ್ದ  ವಾರ್ಷಿಕೋತ್ಸವದ ಸಮಾರಂಭವನ್ನು ಕೈಬಿಟ್ಟು ನಮ್ಮ ಎಲ್ಲ ಪ್ರಾಯೋಜಕರಿಗೆ, ದೇಣಿಗೆಯಿತ್ತ ದಾನಿಗಳಿಗೆ ವಾರ್ಷಿಕ ವರದಿಯನ್ನು ನೀಡುವ ಕ್ರಮವನ್ನು ಜಾರಿಗೊಳಿಸಿದ್ದೆವು. ಈ ನಮ್ಮ ಹೊಸ ಪದ್ಧತಿ ಬಹುಸಂಖ್ಯಾತರ ವಿಶ್ವಾಸವನ್ನು ಗಳಿಸಿಕೊಂಡಿತ್ತು. ಸದರಿ ಮಾದರಿಯನ್ನು ಸತತ ಎರಡನೇ ವರ್ಷ ಅರ್ಥಾತ್ ಆರನೇ ವಸಂತಕ್ಕೂ ಮುಂದುವರೆಸುತ್ತಿದ್ದೇವೆ.
ಈ ಓದುವ ಆಂದೋಲನ ಆರಂಭಗೊಂಡದ್ದು ೨೦೦೪ರ ಅಕ್ಟೋಬರ್ ಎರಡರಂದು. ಪುಟ್ಟ ಬಾಲಕ ಶ್ರೀಷನಿಂದ ವಾಚನಾಲಯದ ಉದ್ಘಾಟನೆಗೊಂಡದ್ದು ಒಂದು ವಿಶೇಷ. ಮುಂದಿನ ನಾಲ್ಕು ವರ್ಷ ವಿವಿಧ ಅತಿಥಿಗಳ ಸಮ್ಮುಖದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗಿತ್ತು. ಡಾ. ವಸುಂಧರಾ ಭೂಪತಿ, ಪೂರ್ಣಪ್ರಜ್ಞ ಬೇಳೂರು, ರೋಹಿಣಿ ಶರ್ಮ ಅಜ್ಜಂಪುರ, ಕೆ.ಎನ್.ವೆಂಕಟಗಿರಿ, ಜಿ.ಯೋಗೀಶ್ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ವಾರ್ಷಿಕ ಸಮಾರಂಭವನ್ನು ನಡೆಸುವ ಕುರಿತು ವಾಚನಾಲಯ ಗಂಭೀರವಾಗಿ ಚಿಂತಿಸಿದೆ.
೨೦೦೯ರ ಅಕ್ಟೋಬರ್ ಒಂದರಿಂದ ೨೦೧೦ರ ಸೆಪ್ಟೆಂಬರ್ ೩೦ರವರೆಗಿನ ಹಣಕಾಸು ವ್ಯವಹಾರದ ವಿವರಗಳನ್ನು ಮೊದಲು ಪರಿಶೀಲಿಸೋಣ. ಈ ಅವಧಿಯಲ್ಲಿ ಜಮಾ ಬಂದ ಮೊತ್ತ ೩೭,೬೯೯/- ರೂ. ಆದರೆ ಖರ್ಚು ೩೮,೦೪೦/- ರೂ. ಆಗಿದ್ದು ಆದಾಯಕ್ಕಿಂತ ೩೪೧/- ರೂ. ಖರ್ಚು ಅಧಿಕವಾಗಿದೆ. ಈ ಆತಂಕದ ಹೊರತಾಗಿಯೂ ಈ ವರದಿ ಸಾಲಿನಲ್ಲಿ  ವಾಚನಾಲಯ ಗರಿಷ್ಟ ಮೊತ್ತದ ಆದಾಯವನ್ನು ಸಂಗ್ರಹಿಸಿರುವುದು ಗಮನಾರ್ಹ ಅಂಶ.
ವರದಿ ಸಾಲಿನಲ್ಲಿ ಬಲು ದೊಡ್ಡ ಸಹಾಯ ಸಿಕ್ಕಿರುವುದು ಶ್ರೀಮತಿ ಸುಧಾ ಮೂರ್ತಿಯವರ ಇನ್ಫೋಸಿಸ್ ಫೌಂಡೇಶನ್‌ನಿಂದ. ಕಂಪ್ಯೂಟರ್ ಖರೀದಿಯ ಬಾಬತ್ತಿಗೆಂದು ಫೌಂಡೇಶನ್ ನಮಗೆ ೧೭,೬೫೨/- ರೂ. ಮಂಜೂರು ಮಾಡಿತ್ತು. ಈ ಮೊತ್ತ ನೇರವಾಗಿ ಇನ್ಫೋಸಿಸ್‌ನಿಂದ ಸಾಗರದ ವಿವೇಕಾನಂದ ಸೈಬರ್ ಸೆಂಟರ್‌ಗೆ ಚೆಕ್ ರೂಪದಲ್ಲಿ ಪಾವತಿಯಾಗಿತ್ತು. ಸದರಿ ಸಂಸ್ಥೆ ತಮ್ಮ ದೇಣಿಗೆ ೭೫೦/- ರೂ. ಸೇರಿಸಿ ಕಂಪ್ಯೂಟರ್ ಉಪಕರಣಗಳನ್ನು ಒದಗಿಸಿತ್ತು. ಇದನ್ನು ವಾಚನಾಲಯದ ಕಛೇರಿಯಲ್ಲಿ ಅಳವಡಿಸಲಾಗಿದ್ದು ಗ್ರಾಮಸ್ಥರಿಗೆ ತರಬೇತಿ ಕೊಡುವ ಯೋಜನೆಯನ್ನು ಈಗಾಗಲೆ ಜಾರಿಗೊಳಿಸಲಾಗಿದೆ. ಸಾಂಕೇತಿಕ ಶುಲ್ಕ ಪಡೆದು ಈವರೆಗೆ ಏಳು ಮಂದಿಗೆ ತರಬೇತಿ ಕೊಡಲಾಗುತ್ತಿದೆ.
ನಮ್ಮ ಐದನೇ ವರ್ಷದ ವಾರ್ಷಿಕ ವರದಿಯನ್ನು ಗಮನಿಸಿದ ಇನ್ಫೋಸಿಸ್‌ನ ಶ್ರೀಮತಿ ಸುಧಾಮೂರ್ತಿಯವರು ತಾವೇ ಫೋನ್ ಮಾಡಿ ಕಂಪ್ಯೂಟರ್ ಸಹಾಯ ಒದಗಿಸುವ ಭರವಸೆ ಇತ್ತಿದ್ದು ಸ್ಮರಣಾರ್ಹ. ಫಲಿತಾಂಶವೆಂಬಂತೆ, ವಿನಂತಿ ಪತ್ರಗಳಿಗಿಂತ ಪಾರದರ್ಶಕ ವಾರ್ಷಿಕ ವರದಿ ಹೆಚ್ಚು ಪ್ರಭಾವಶಾಲಿ ಎಂದು ಭಾವಿಸುವಂತಾಗಿದೆ.
ಕಂಪ್ಯೂಟರ್ ಸೌಕರ್ಯಕ್ಕೆ ಪೂರಕವಾಗಿ ವಾಚನಾಲಯದ ಖಾತೆಯಿಂದ ಯುಪಿಎಸ್ ಖರೀದಿಸಲಾಗಿದೆ. ಪಶುವೈದ್ಯ ಸ್ನೇಹಿತರಾದ ನಂದೀತಳೆ ಡಾ. ಶ್ರೀಪಾದರಾವ್ ಕಂಪ್ಯೂಟರ್‌ಗೆ ಸೂಕ್ತವಾದ ಟೇಬಲ್‌ನ ಕೊಡುಗೆ ಇತ್ತಿದ್ದಾರೆ. ಒಂದೂವರೆ ಸಾವಿರ ರೂ. ವೆಚ್ಚದ ದೇಣಿಗೆಯಿತ್ತಿದ್ದಕ್ಕೆ ನಮ್ಮ ಧನ್ಯವಾದ. ೨೦೧೦ರ ವರ್ಷಾರಂಭದಲ್ಲಿಯೇ ಬೆಂಗಳೂರಿನ ‘ನಿಜಕವೆ’ ದತ್ತಿ ನಮಗೆ ಐದು ಸಾವಿರದ ಮುನ್ನೂರು (೫,೩೦೦/-) ರೂ. ವೆಚ್ಚದ ಅಲ್ಮೆರಾವೊಂದನ್ನು ಒದಗಿಸಿದೆ. ಇದಕ್ಕೆ ಕಾರಣಕರ್ತರಾದ ನಿಜಕವೆ ದತ್ತಿಯ ಬಿ.ಆರ್.ಪ್ರಸಾದ್‌ರನ್ನು ಸದಾ ಸ್ಮರಿಸಿಕೊಳ್ಳುತ್ತೇವೆ. ಅಂತೆಯೇ ಈ ವರ್ಷ ಕೂಡ ದೇಣಿಗೆಗಳು ಲಭ್ಯವಾಗಿದ್ದು ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಶಿಯವರು ಹಾಗೂ ಭೀಮನಕೋಣೆಯ ಜಿ.ರಾಘವೇಂದ್ರ ತಲಾ ಒಂದು ಸಾವಿರ ರೂ.ಗಳ ದೇಣಿಗೆ ಇತ್ತಿದ್ದು ಇವನ್ನು ಠೇವಣಿ ಮೊತ್ತಕ್ಕೆ ಸೇರಿಸಲಾಗಿದೆ.
ಈಗ ನಮ್ಮೊಂದಿಗಿರುವ ಪ್ರಾಯೋಜಕರು ೩೬. ಕಳೆದ ಸಾಲಿಗಿಂತ ಏಳು ಮಂದಿ ಹೆಚ್ಚು. ೨೧ ಉಚಿತ ಪತ್ರಿಕೆಗಳು ಸೇರಿದಂತೆ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ೬೩. ಪ್ರಾಯೋಜಕರ ಸಂಖ್ಯೆ ಹೆಚ್ಚಿದ್ದರೂ ಪತ್ರಿಕೆಗಳ ಸಂಖ್ಯೆ ತುಸು ಕುಸಿಯಲು ಒಮ್ಮೆಗೇ ಏರಿರುವ ಪತ್ರಿಕೆಗಳ ಬೆಲೆ ಮುಖ್ಯ ಕಾರಣ. ಆದರೂ ಈಗಲೂ ಕನ್ನಡದ ಬಹುಪಾಲು ಪತ್ರಿಕೆಗಳು ನಮ್ಮಲ್ಲಿ ಲಭಿಸುತ್ತದೆ ಎನ್ನುವುದನ್ನು ಹೆಮ್ಮೆಯಿಂಧ ಹೇಳಿಕೊಳ್ಳಬಯಸುತ್ತೇವೆ.
ಆರು ವಸಂತಗಳನ್ನು ಪೂರೈಸಿ ಗಟ್ಟಿಯಾಗಿ ನಿಂತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸಹೃದಯರ ಪ್ರಾಯೋಜಕತ್ವವನ್ನು ನಿರೀಕ್ಷಿಸಿದ್ದೆವು. ಅದು ಫಲ ಕಂಡಿಲ್ಲ ಎನ್ನುವುದಕ್ಕೆ ಚೂರು ನಿರಾಶೆಯೂ ಅನುಭವಕ್ಕೆ ಬಂದಿದೆ. ಸಂಸ್ಥೆಯೊಂದಕ್ಕೆ ಕೊಡಬೇಕಾದ ಪ್ರಚಾರವನ್ನು ನಮಗೆ ಕೊಡಲಾಗುತ್ತಿಲ್ಲ ಎನ್ನುವುದೂ ಈ ಹಿನ್ನಡೆಗೆ ಕಾರಣವಿರಬಹುದು. ದೇಣಿಗೆಗಳ ಸಂಗ್ರಹದಿಂದ ೨೫,೨೮೨/- ರೂ.ಗಳನ್ನು ಠೇವಣಿಯಾಗಿ ಇರಿಸಲಾಗಿದೆ. ಈ ಮೊತ್ತ ಕಳೆದ ವರ್ಷದ ಠೇವಣಿಗೆ ೩,೮೩೯/- ರೂ.ಸೇರಿಸಿದಂತಾಗಿದೆ.
ಈ ವರ್ಷವೂ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯಡಿ ಪತ್ರಿಕೆ, ಪುಸ್ತಕಗಳನ್ನು ಒದಗಿಸುತ್ತಿದ್ದು ಅಲ್ಲಿನ ಶಿಕ್ಷಕ ರಾಮಚಂದ್ರ ಹೆಗಡೆ ಇದನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ೩೫ ಮಕ್ಕಳು ರಿಯಾಯತಿ ದರ ೧೫/- ರೂ. ಕೊಟ್ಟು ಸದಸ್ಯರಾಗಿದ್ದಾರೆ. ಆರು ಬಿಡಿ ಸಾಮಾನ್ಯ ಸದಸ್ಯರು ಸೇರಿದಂತೆ ೪೧ ಮಂದಿ ಸದಸ್ಯತ್ವ ಪಡೆದಂತಾಗಿದೆ. ಪತ್ರಿಕೆಗಳಿಗಾಗಿ ಮಾಸಿಕ ೮೫೯ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಕಳೆದ ಬಾರಿಗಿಂತ ೧೫೮/- ರೂ. ಹೆಚ್ಚು.
ಮುಂಬರುವ ದಿನಗಳಲ್ಲಿ ಹಲವು ಗುರಿಗಳನ್ನು ಇರಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಕಂಪ್ಯೂಟರ್ ತರಬೇತಿ ಒದಗಿಸಬೇಕೆನ್ನುವ ಯೋಜನೆಯಿದೆ. ಈಗಾಗಲೇ ಪ್ರಸ್ತಾವನೆಯನ್ನು ಪಂಚಾಯ್ತಿಗೆ ಅನುಮೋದನೆಗೆ ಸಲ್ಲಿಸಲಾಗಿದೆ. ಸ್ವಂತ ಕಟ್ಟಡದ ಕುರಿತಾಗಿಯೂ ಕನಸು ಕಾಣಲಾರಂಭಿಸಿದ್ದೇವೆ. ಗ್ರಾಮದ ಅಷ್ಟೂ ಮಾಹಿತಿಯ ‘ಡಾಟಾ ಸೆಂಟರ್’ ಮಾಡಲು ಅಗತ್ಯವಾದ ಕಂಪ್ಯೂಟರ್ ಸಿಕ್ಕಿರುವುದರಿಂದ ಒಂದು ಹೆಜ್ಜೆಯನ್ನು ಆ ದಿಕ್ಕಿನಲ್ಲಿ ಇರಿಸಿದಂತಾಗಿದೆ.
ಪ್ರಗತಿಯ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡಲು ಕಾರಣಕರ್ತರು ನೀವು- ಪ್ರಾಯೋಜಕರಾಗಿ, ಉಚಿತ ಪತ್ರಿಕೆ ಕಳುಹಿಸಿಕೊಡುವವರಾಗಿ, ಕೊಡುಗೈ ದಾನಿಗಳಾಗಿ ನಮ್ಮನ್ನು ಉಪಕರಿಸಿದ್ದೀರಿ. ನಿಮಗೆ ನಾವು ಸದಾ ಕೃತಜ್ಞ್ಞರು. ಈ ಸಹಾಯ ಮುಂದುವರೆಸುವುದರ ಜೊತೆಗೆ ನಿಮ್ಮ ಆತ್ಮೀಯರಿಂದಲೂ ಈ ಅಕ್ಷರ ಆಂದೋಲನಕ್ಕೆ ಕೈಜೋಡಿಸಲು ಪ್ರೇರೇಪಿಸಿ ಎಂದು ವಿನಂತಿಸುತ್ತೇವೆ.
-ಮಾವೆಂಸ,
ಸಂಚಾಲಕರು, ೨೨.೧೦.೨೦೧೦

ನಮ್ಮೊಂದಿಗೆ ಡಾ. ವಸುಂಧರಾ ಭೂಪತಿ...........


                                   ಪ್ರಥಮ ಬಹುಮಾನ...ಲಲಿತಾ ಜಿ. ಭಟ್ 
                                    ಶುಭ ಸ್ವಾಗತ...


                                   ಜೊತೆಯಲ್ಲಿ ಪೂರ್ಣಪ್ರಜ್ನ ಬೇಳೂರು........ 






                             
                               




                                
ನಮ್ಮ ಕುರಿತು ಬರೆದ ಶಿವಮೊಗ್ಗದ `ನಮ್ಮ ನಾಡು' ಪತ್ರಿಕೆಗೆ ಧನ್ಯವಾದ. ಓದುವ ಲಿಂಕ್ ಕೆಳಗಿನಂತಿದೆ .....

5ನೇ ವರ್ಷದ ಪ್ರಗತಿ ವರದಿ -2009


ಐದು ಹೆಜ್ಜೆಗಳ ಕುರಿತು.......


ಈ ನಮ್ಮ ಮ್ಮೆಲ್ಲರ ವಾಚನಾಲಯಕ್ಕೆ ಈಗ ಐದು ವರ್ಷಗಳು ಸಂದ ಕಾಲ. ೨೦೦೪ರ ಅಕ್ಟೋಬರ್ ೨ರಂದು ಅಧಿಕೃತವಾಗಿ ಆರಂಭಗೊಂಡಿತ್ತು. ಓದುವ ಆಂದೋಲನದ ನೆನಪಿಗಾಗಿ ಪ್ರತಿ ವರ್ಷ ಇದೇ  ದಿನದಂದು ವಾರ್ಷಿಕೋತ್ಸವವನ್ನು ವಾಚನಾಲಯದ ಆವರಣದಲ್ಲಿ ಹಮ್ಮಿಕೊಳ್ಳುತ್ತಿದ್ದೆವು. ಒಂದಿಬ್ಬರು  ಅತಿಥಿಗಳ ಜೊತೆ ಊರವರ ಒಂದು ಸಂಜೆ ಕಳೆಯುತ್ತಿತ್ತು. ಈ ಬಾರಿ ನಮ್ಮ ನಡಾವಳಿಯಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಂಡಿದ್ದೇವೆ. ವಾರ್ಷಿಕೋತ್ಸವ ಎಂಬ ಸಮಾರಂಭವನ್ನು ಕೈಬಿಟ್ಟಿದ್ದೇವೆ. ಆದರೆ ಪ್ರತಿ ವರ್ಷವೂ ವಾಚನಾಲಯದ ಬೆಳವಣಿಗೆ, ವಾರ್ಷಿಕ ಲೆಕ್ಕಾಚಾರಗಳನ್ನು ನಮ್ಮೆಲ್ಲ ಪ್ರಾಯೋಜಕರು,  ಹಿತೈಷಿಗಳ ಮುಂದಿಡಬೇಕೆಂದು ನಿರ್ಧರಿಸಿದ್ದೇವೆ. ಅದರ ಫಲಿತಾಂಶವೇ ಈ ವರದಿ.
೨೦೦೮ರ ಅಕ್ಟೋಬರನಿಂದ  ಈ ವರ್ಷದ ಸೆಪ್ಟೆಂಬರ್‌ವರೆಗಿನ ಚಟುವಟಿಕೆಗಳನ್ನು ದಾಖಲಿಸುತ್ತಿದ್ದೇವೆ. ಇಂದು ನಮ್ಮ ಜೊತೆಗಿರುವ ವರ್ಗಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.   ೧. ದಾನಿಗಳು - ದೊಡ್ಡ ಮೊತ್ತದ ಹಣಕಾಸಿನ ನೆರವು, ಪುಸ್ತಕ ರೂಪದ ಕೊಡುಗೆ ಇತ್ತವರು. ೨. ಪ್ರಾಯೋಜಕರು - ಪ್ರತಿ ವರ್ಷ, ಪ್ರತಿ ತಿಂಗಳು ಇಂತಿಷ್ಟು ಎಂಬ ಮೊತ್ತವನ್ನು ನಮಗೆ ನೀಡಿ ಆ ಮೂಲಕ ನಿಯತಕಾಲಿಕಗಳನ್ನು ವಿಕ್ರಯಿಸಲು ಸಹಾಯ ಮಾಡಿದವರು. ೩. ಸದಸ್ಯರು - ಪ್ರತಿ ತಿಂಗಳು ನಿಗದಿತ ಶುಲ್ಕ ಕಟ್ಟಿ ಪುಸ್ತಕಗಳನ್ನು ಮನೆಗೊಯ್ದು ಓದುವವರು. ಮತ್ತು ೪. ಸಾಮಾನ್ಯ ಓದುಗರು - ವಾಚನಾಲಯ ತೆರೆದಿರುವ ಸಮಯದಲ್ಲಿ ತಮ್ಮ ಓದಿನ ದಾಹ ತೀರಿಸಿಕೊಳ್ಳಲು ಬರುವ ಗ್ರಾಮಸ್ಥರು, ಅಭ್ಯಾಗತರು.
ಈವರೆಗೆ ನಮ್ಮೊಂದಿಗೆ ಕೈಜೋಡಿಸಿರುವ ದಾಗಳ ಸಂಖ್ಯೆ ಒಟ್ಟು ಎಂಟು. ಐದು ವರ್ಷಗಳಲ್ಲಿ ನಮಗೆ ದಕ್ಕಿರುವ ಹಣ ಬೆಂಬಲ ೩೦,೪೫೬ ರೂ.. ಅದರಲ್ಲಿ ಮ್ಯಾಮ್ಕೋಸ್ ಒದಗಿಸಿದ ಹಣದಲ್ಲಿ   (೪,೪೫೬ ರೂ.) ಪುಸ್ತಕಗಳನ್ನು ಖರೀದಿಸಲಾಗಿದೆ. ವೆನಿಲ್ಲಾ ಸಣ್ಣ ಬೆಳೆಗಾರರ ಸಂಘ(ರಿ) ಸಾಗರ ನೀಡಿದ ಐದು  ಸಾವಿರ ರೂ.ಗಳಲ್ಲಿ ಒಂದು ಸಾವಿರ ರೂ.ಗಳನ್ನು ಈ ವರ್ಷ ಪ್ಲಾಸ್ಟಿಕ್ ಕುರ್ಚಿ ಖರೀದಿಸಲು ಬಳಸಲಾಗಿದೆ.  ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ದೇಣಿಗೆಯಾಗಿತ್ತ ೮ ಸಾವಿರ ರೂ.ಗಳಲ್ಲಿ ಐದು ಸಾವಿರ ರೂ.ಗೆ ಕಬ್ಬಿಣದ ಅಲ್ಮೆರಾವನ್ನು ಖರೀದಿಸಲಾಗಿದೆ. ಉಳಿದಂತೆ ೨೧,೪೪೩ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ನಲ್ಲಿ ಠೇವಣಿಯಾಗಿರಿಸಲಾಗಿದೆ.
ನಮಗೆ ಧನಸಹಾಯವಿತ್ತವರಲ್ಲಿ ಹೊರನಾಡಿನ ಭೀಮೇಶ್ವರ ಜೋಶಿಯವರು, ಭೀಮನಕೋಣೆಯ ಜಿ.ರಾಘವೇಂದ್ರ ಹಾಗೂ ಸಾವಿತ್ರಮ್ಮ & ಎಲ್.ಟಿ.ತಿಮ್ಮಪ್ಪ ಪ್ರತಿಷ್ಠಾನಗಳಿಂದ ತಲಾ 3 ಸಹಸ್ರ ರೂ.ಗಳ ಧನಸಹಾಯ ಸಿಕ್ಕಿದೆ. ಅಂತೆಯೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಹಾಗೂ ಹರ್ಷ ಕೈತೋಟ ಇವರಿಂದ ದಕ್ಕಿದ ತಲಾ ಎರಡು ಸಾವಿರ ರೂ.ಗಳ ಬೆಂಬಲವನ್ನೂ ಇಲ್ಲಿ ನೆನೆಯಬೇಕು. 
ಪ್ರಸ್ತುತ ನಮ್ಮೊಂದಿಗಿರುವ ಪ್ರಾಯೋಜಕರ ಸಂಖ್ಯೆ ೨೯. ಮಾಸಿಕ ೧೧ ರೂ.ಗಳಿಂದ ಗರಿಷ್ಟ ವಾರ್ಷಿಕ ೫೨೦ ರೂ. ನೀಡುವವರೆಗಿನ ಪ್ರಾಯೋಜಕರಿದ್ದಾರೆ. ಪ್ರಾಯೋಜಕರ ಪಟ್ಟಿಯನ್ನು ವಾಚನಾಲಯದ ಆವರಣದಲ್ಲಿ ಎದ್ದುಕಾಣುವಂತೆ ಪ್ರಕಾಶಿಸಲಾಗಿದೆ. ಇದೇ ಮಾದರಿಯಲ್ಲಿ ದಾನಿಗಳ ವಿವರವಾದ ಫಲಕ ಕೂಡ ಇಲ್ಲಿ ಜೋಡಿಸಲಾಗಿದೆ. ಪ್ರಸ್ತುತ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ಬರೋಬ್ಬರಿ ೬೪. ಇದರಲ್ಲಿ ೨೨ ಪತ್ರಿಕೆಗಳು ಸಂಪಾದಕರು ಹಾಗೂ ಪ್ರಕಾಶಕರ ಉದಾರತೆಯಿಂದ ಉಚಿತವಾಗಿ ಲಭಿಸುತ್ತಿವೆ. ಉಳಿದ ೪೨ ಪತ್ರಿಕೆಗಳಿಗೆ ನಾವು ಪ್ರತಿ ತಿಂಗಳು ೭೦೧ ರೂ. ವೆಚ್ಚ ಮಾಡುತ್ತಿದ್ದೇವೆ. ಎಲ್ಲ ಪತ್ರಿಕೆಗಳ ವಿಶೇಷಾಂಕಗಳನ್ನು ಖರೀದಿಸಿ ಓದಲು ನೀಡುವುದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.
ಈ ವರ್ಷದಿಂದ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ಮಕ್ಕಳಿಗೆ ವಿಶೇಷ ಯೋಜನೆಯಡಿ ಶಿಕ್ಷಣ ಮೌಲ್ಯದ ಪತ್ರಿಕೆ, ಪುಸ್ತಕಗಳನ್ನು ಒದಗಿಸುತ್ತಿದ್ದೇವೆ. ಈ ಯೋಜನೆಗೆ ಒಟ್ಟು ೩೮ ಮಕ್ಕಳು ಸದಸ್ಯರಾಗಿದ್ದಾರೆ. ಇವರಿಗೆ ವಾರ್ಷಿಕ ಕೇವಲ ೧೫ ರೂ. ಸದಸ್ಯತ್ವ ಶುಲ್ಕ ಪಡೆಯಲಾಗುತ್ತಿದೆ. ಒಂದರ್ಥದಲ್ಲಿ, ಇಂದು ನಮ್ಮ ವಾಚನಾಲಯದ ಸದಸ್ಯರ ಸಂಖ್ಯೆ ೪೭. ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್  ನಮ್ಮ ವಾಚನಾಲಯದ ಮೂಲಕ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲು ಯೋಜಿಸಿದ್ದು ಇದು ೨೦೧೦ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ. ಈ ವರ್ಷ ಅತ್ಯಮೂಲ್ಯ ಪುಸ್ತಕಗಳನ್ನು ಉಚಿತವಾಗಿ ಒದಗಿಸಿದ ಬೆಂಗಳೂರಿನ ನಾಗನಾಥಮೂರ್ತಿಯವರನ್ನು ಇಲ್ಲಿ ಸ್ಮರಿಸಲೇಬೇಕು. ವರದಿ  ಸಾಲಿನಲ್ಲಿ ತರಂಗ ಸಾಪ್ತಾಹಿಕ (ಅಕ್ಟೋಬರ್ ೨೯, ೦೯)ದಲ್ಲಿ ವಾಚನಾಲಯದ ಕುರಿತ ಮತ್ತೀಗಾರ ನಾಗರಾಜರ ಲೇಖನ ಪ್ರಕಟವಾಗಿದೆ. ವಿಕ್ರಮ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲೂ ವಾಚನಾಲಯವನ್ನು ಉಲ್ಲೇಖಿಸಿ ವರದಿ ಬರೆಯಲಾಗಿದೆ. ಇವುಗಳೆಲ್ಲದರ ಪರಿಣಾಮವಾಗಿ ಹಲವರ ಬೆಂಬಲದ ಆಶ್ವಾಸನೆ ದೊರಕಿದೆ.
ದಿನದಿಂದ ದಿನಕ್ಕೆ ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ ಪ್ರಗತಿಯತ್ತಲೇ ಸಾಗಿದೆ  ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅದಕ್ಕೆ ಅತಿ ಮುಖ್ಯವಾಗಿ ನಿಮ್ಮ ಬೆಂಬಲ ಕಾರಣ. ಅದನ್ನು ಹೃತ್ಪೂರ್ವಕವಾಗಿ ನೆನೆಯುತ್ತೇವೆ.ನಿಮ್ಮ ನಿರಂತರ ನೆರವಿನ ಜೊತೆಗೆ ತಮ್ಮ ಬಳಗದ   ಇತರ ಸಾಹಿತ್ಯಾಭಿಮಾನಿಗಳ ಸಹಾಯವನ್ನೂ ನಮಗೆ ಒದಗಿಸಿದಲ್ಲಿ ನಾವು ಕೃತಜ್ಞರು.
ವಂದನೆಗಳೊಂದಿಗೆ, 




-ಮಾವೆಂಸ, 
ಸಂಚಾಲಕರು, ೦೧.೧೧.೨೦೦೯









4 ನೇ ವರ್ಷದ ಪ್ರಗತಿ ವರದಿ -2008

ಇನ್ನು ಕೆಲ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು...

ತೃತೀಯ ವರ್ಷದ ಪ್ರಗತಿ ವರದಿ -2007

ಇನ್ನು ಕೆಲ ದಿನಗಳಲ್ಲಿ ಪೋಸ್ಟ್ ಮಾಡಲಾಗುವುದು...